Date
Time
Location
Info
ಸ್ವರಸಾಮ್ರಾಜ್ಞಿ ಡಾ. ಗಂಗೂಬಾಯಿ ಹಾನಗಲ್
ಕಿರಾಣಾ ಘರಾಣೆಯ ಸ್ಥಾಪಕರಾದ ಅಬ್ದುಲ್ ಕರೀಂ ಖಾನ್ ಕರ್ನಾಟಕೀ ಸಂಗೀತದ ಹಾಡುಗಾರ್ತಿ ಅಂಬಾಬಾಯಿ ಅವರ ಮನೆಗೆ ಬಂದರು.
ಅಲ್ಲಿದ್ದವಳು ಅಂಬಾಬಾಯಿಯ ಪುಟ್ಟ ಮಗಳು . ಅವಳ ಕಡೆ ಉಸ್ತಾದರು "ಗಾವೋ ಬೇಟಿ.. ಒಂದು ಹಾಡು ಹಾಡು.. "ಎಂದರು. ಕೀರ್ತನೆಯೊಂದನ್ನು ಹಾಡಿದ ಆ ಬಾಲಕಿಗೆ ಉಸ್ತಾದ್ ಕರೀಂ ಖಾನರು " ಖೂಬ್ ಖಾವೋ ಖೂಬ್ ಗಾವೋ "ಎಂದು ಆಶೀರ್ವದಿಸಿದರು. ಅವರ ಬಾಯಿಯ ಹಾರೈಕೆಯೋ ಏನೋ ಆ ಬಾಲಕಿಯ ಬಾಯಲ್ಲಿ ಸ್ವರ ನೆಲೆಸಿತು. ಆಕೆ ಸಂಗೀತದ ಮೇರುವಾದಳು. ಆಕೆ ಮುಂದೆ ಹೆಸರಾದದ್ದು ಗಂಗೂಬಾಯಿ ಎಂದು.
ಗಂಗೂಬಾಯಿ ಅವರ ಸ್ವರವೇ ವಿಶಿಷ್ಟ. ಕೇಳಿದರೆ ಗಂಡಸರು ಹಾಡುತ್ತಾರೆನೋ ಎಂಬಂತ ದನಿ. ನೋಡಿದರೆ ಹಾಡುವಳು ಹೆಣ್ಣು. ಗಂಟಲು ಆಪರೇಷನ್ ಗೆ ಒಳಗಾದ ಗಂಗೂಬಾಯಿಯವರ ಸ್ವರ ಹೀಗೆ ಬದಲಾಯಿತು. ಧ್ವನಿ ಗಡುಸಾಯಿತು. ಗಂಡು ಮೆಟ್ಟಿದ ನಾಡಲ್ಲಿ ಹುಟ್ಟಿದ ಈ ಹೆಣ್ಣಿನ ಸ್ವರವೂ ಗಟ್ಟಿಯಾಯಿತು.
ಗಂಗೂಬಾಯಿ ಅವರು ಜನಿಸಿದ್ದು ಸ್ವಾತಂತ್ರ್ಯ ಪೂರ್ವ ಸಮಯದಲ್ಲಿ. ಆಗ ಸ್ತಿತ್ಯಂತರದ ಸಮಯ. ಅಂದು ಸಂಗೀತ ಬಹುತೇಕ ಪುರುಷರು ಮಾತ್ರ ಇರಬಹುದಾದ ಕ್ಷೇತ್ರ ಎನ್ನುವಂತಿತ್ತು. ಕೆಲ ರಾಗಗಳೂ ಸಹ ಪುರುಷಕಂಠಕ್ಕೆ ಮೀಸಲಾಗಿದ್ದವು. ಈ ಸಂದರ್ಭದಲ್ಲಿ ಗಂಗೂಬಾಯಿ ತನ್ನ ಕಂಠದ ದನಿಯ ಮಾರ್ಪಡಾದಾಗ, ಗಂಡಸರೇ ಮೇಲಾಗಿ ಹಾಡುತ್ತಿದ್ದ, ಗಡಸು ಕಂಠಕ್ಕೆ ಸೂಕ್ತವೆನ್ನುವ ದರ್ಬಾರಿ ರಾಗ ಹಾಡಿ ಸೈ ಎನಿಸಿಕೊಂಡ ಗಟ್ಟಿಗಿತ್ತಿ ಹಾನಗಲ್ಲ ಗಂಗೂಬಾಯಿ ಅವರು . ಪ್ರತಿಷ್ಠಿತ ಕಿರಾನಾ ಘರಾನೆಯ ಛಾತಿ ಬೆಳಗಿಸಿದವರು. ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಭೂಷಣ , ಪದ್ಮವಿಭೂಷಣ ಮುಡಿಗೇರಿಸಿಕೊಂಡವರು.
ಅವರನ್ನು ಅರಸಿ ಬಂದ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ಒಂದೇ ಎರಡೇ.
ಐವರು ಪ್ರಧಾನಿಗಳಿಂದ ಸಮ್ಮಾನ ಸ್ವೀಕರಿಸಿ ಅಪರೂಪದ ಅನನ್ಯತೆ ಅವರದ್ದು.
ಅವರನ್ನೇನಾದರು ಕೇಳಿದರೆ , ' ಪ್ರಶಸ್ತಿ ಅಂತಾವೇನೂ ಬರ್ತಾವು ಹೋಗ್ಅವು ಬಿಡ್ರಿ ಅದ...' ಎನ್ನುವ ಅಹಮ್ಮಿರದ ನಿರ್ಲಿಪ್ತತೆ ಅವರ ಸ್ವಭಾವ.
ಇಪ್ಪತ್ತೈದಕ್ಕೂ ಹೆಚ್ಚು ಬಿರುದುಗಳ ಧರಿಸಿದರೂ ಗರ್ವ ಗಂಗಾಬಾಯಿಯ ನೆತ್ತಿಗೇರಲಿಲ್ಲ. ಅವರಲ್ಲಿ ಸದಾ ಇದ್ದುದು ಹಳ್ಳಿ ಸೊಗಡಿನ ಮುಗ್ಧ ಮನಸು.
' ನಾನು ಮುಂಬೈದಾಗ ಹಾಡಿದ್ರ..ಹುಬ್ಳಿಯಾಗ ಕೇಳ್ತಿತ್ತ್..ಅದು ನನಗ ಖುಷಿ ಮಜಾಕೊಡ್ತಿತ್ತು ಅದರ ಸಲುವಾಗಿ ನಾ ಹಾಡ್ತಿದ್ದೆ..' ಎನ್ನುವ ಅವರ ನುಡಿ ಇದಕ್ಕೆ ಪುಷ್ಟಿ.
ಪ್ರಸ್ತುತ ಕರ್ನಾಟಕ ಸಂಗೀತ ವಿವಿಗೆ ಇರುವುದು ಅವರದೇ ಹೆಸರು. ನಾದದ ಗಂಗಾವತರಣ ಅದು. ಗಂಗಾನದಿಯಲಿ ನೀರು ಹರಿಯುವಂತೆ ಗಂಗೂಬಾಯಿಯ ಸ್ವರ ಹರಿಯುತ್ತಿತ್ತು. ಕಿರಾನಾ ಘರಾನೆಯಲ್ಲಿ ಸ್ವರಕ್ಕೆ ವಿಶೇಷ ಪ್ರಾಧಾನ್ಯತೆ. ಆ ನಾದ ತರಂಗದಲಿ ಪ್ರೋಕ್ಷಿತರಾದವರೂ ಸಹ ಸಂಗೀತದ ಒಂದೊಂದು ಮುತ್ತಾದರು.
ಆಕಾಶವಾಣಿಯಲ್ಲಿ ಮುದ್ರಿತವಾದ ಮೊದಲ ಯುಗಳ ಶಾಸ್ತ್ರೀಯ ಗಾಯನ ಗಂಗೂಬಾಯಿಯವರದ್ದು.
" ಸ್ವಾಗತವು ಸ್ವಾಗತವು ಸಕಲ ಜನ ಸಂಕುಲಕೆ '' ಎಂದು ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯೆದುರುch ಹಾಡಿದ ಕೀರ್ತಿ ಸಲ್ಲುವುದು ಗಂಗೂಬಾಯಿವರಿಗೇ.
ಸದ್ಯ ಅವರ 108ನೇ ಜನ್ಮ ವರ್ಷಾಚರಣೆ.
ಅವರ ನೆನೆಪಿನಲ್ಲಿ
ಭಾರತೀಯ ಸಂಗೀತ ವಿದ್ಯಾಲಯ ಮತ್ತು D.A.S.A ಟ್ರಸ್ಟ್ ಸಹಯೋಗದಲ್ಲಿ ಸ್ವರ ಸಾಮ್ರಾಜ್ಞಿಯ ನಾದ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಿದೆ.
ನಾಡಿನ ಖ್ಯಾತ ಬಾನ್ಸುರಿ ವಾದಕ ಪಂ. ಪ್ರವೀಣ ಗೋಡ್ಖಿಂಡಿ ಹಾಗೂ ಅವರ ಪುತ್ರ ಶ್ರೀ ಷಡಜ್ ಗೋಡ್ಖಿಂಡಿ ಅವರ ಯುಗಳ ಕೊಳಲು ವಾದನಕ್ಕೆ ಯಶವಂತ್ ವೈಷ್ಣವ್ ಅವರ ತಬಲಾದ ರಿಂಗಣವಿರುವುದು. ಈ ಸಂದರ್ಭಕ್ಕೆ ಧಾರವಾಡದ ಸೃಜನಾ ರಂಗಮಂದಿರ ಸಜ್ಜಾಗಲಿದೆ.
ಸಹೃದಯ ನಾದಾಸಕ್ತರು , ಸಂಗೀತ ಶ್ರೋತೃಗಳು, ಕಲಾಪೋಷಕರಿಗೆಲ್ಲ ಆದರದ ಸ್ವಾಗತ.
ಸ್ಥಳ- ಅಣ್ಣಾಜಿರಾವ್ ಸಿರೂರ ಸೃಜನಾ ರಂಗಮಂದಿರ ( ಕರ್ನಾಟಕ ಕಾಲೇಜು ಆವರಣ) ಧಾರವಾಡ.
ದಿನಾಂಕ- ಮಾರ್ಚ್ 7, 2021 ಭಾನುವಾರ
ಸಮಯ - ಸಂಜೆಯ 5:45 ಗಂಟೆ
ನಾವು ಸಹಜ ಸ್ಥಿತಿಗೆ ಮರಳಿದರೂ ಕೊವಿಡ್-19 ರ ಪಸೆ ಆರಿಲ್ಲದ ಕಾರಣ ಬರುವಾಗ ಮರೆಯದೆ ಮುಖಗವಸು ಧರಿಸಿ, ಎರಡು ಗಜ ದೂರದಿಂದ ಅಂತರ ಕಾಯ್ದುಕೊಂಡು ಸಹಕರಿಸಿ.
------------------------------------------------
Date :-March 07 2021
Time :- 5:45 PM
Location:- Annajirao Shirur Rangamandira,Dharwad
Performance by :- Praveen Godkhindi and Shadaj Godkhindi(Flute)
-----------------------------------------------
Please Note
Event timings may vary slightly
Address