ರಚನೆ : ಶ್ರೀ. ಗೋಪಾಲಕೃಷ್ಣ ಅಡಿಗ
ಮೌನ ತಬ್ಬಿತು ನೆಲವ
ಜುಮ್ಮೆನೆ ಪುಳಕಗೊಂಡಿತು ಧಾರಿಣಿ ।।ಪ ।।
ನೋಡಿ ನಾಚಿತು ಬಾನು
ಸೇರಿತು ಕೆಂಪು ಸಂಜೆಯ ಕದಪಲಿ ।।೧।।
ಹಕ್ಕಿಗೊರಲಿನ ಸುರತಗಾನಕೆ
ಬಿಗಿಯು ನಸುವೆ ಸಡಿಲಿತು
ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು ।।೨।।
ಇರುಳ ಸೆರಗಿನ ನೆಳಲು ಚಾಚಿತು
ಬಾನು ತೆರೆಯಿತು ಕಣ್ಣನು
ನೆಲವು ತಣಿಯಿತು, ಬೆವರು ಹನಿಯಿತು
ಭಾಷ್ಪ ನೆನೆಸಿತು ಹುಲ್ಲನು ।।೩।।
ಮೌನ ಉರುಳಿತು, ಹೊರಳಿತೆದ್ದಿತು
ಗಾಳಿ ಭೋರನೆ ಬೀಸಿತು
ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು ।।೪।।